ನೆಲೆಗಾಣದ ಹಕ್ಕಿ
( ಈ ಕಥೆಯ ಕಾಲಮಾನ ಸುಮಾರು 2000 ನೆಯ ಇಸವಿ ಎಂದು ಭಾವಿಸಬಹುದು. ಮೊಬೈಲ್ ಇಲ್ಲದ ಕಾಲ)
ಹೊರಗೆ ಜೋರಾಗಿ ಕಾರಿನ ಹಾರನ್ ಶಬ್ದ ಕೇಳಿಸಿತು. ಮಹಡಿ ಮೇಲಿನ ತನ್ನ ಕೋಣೆಯ ಕಿಟಕಿಯಿಂದ, ತೆರೆ ಸರಿಸಿ ಬಗ್ಗಿ ನೋಡಿದಳು ಸೌದಾಮಿನಿ.
ಓಡಿಬಂದು ವಾಚ್ ಮ್ಯಾನ್ ಗೆಟನ್ನು ತೆರೆದ. ಕೆನೆ ಬಣ್ಣದ ಕಾಂಟೆಸ್ಸಾ ಕಾರು, ತೆರೆದ ಗೇಟಿನೊಳಗಿಂದ ಒಳ ಸಾಗಿ ಬಂದು ಮನೆಯ ಮುಂಭಾಗದ ರ್ಪೋರ್ಟಿಕೋದ ಒಳಗೆ ಬಂದು ನಿಂತಿತು. ತಟ್ಟನೆ ಅವಳ ಮುಖದ ಕಾಂತಿ ಆರಿ ಮಂಕಾಯಿತು. ನಿರುತ್ಸಾಹ ನಿಟ್ಟುಸಿರಾಗಿ ಚಿಮ್ಮಿ ಬಂದು ಅವಳು ಕಿಟಕಿಯಿಂದ ತಟ್ಟನೆ ಹಿಂಸರಿದು, ಸಪ್ಪಗೆ ಅಡಿಯಿರಿಸುತ್ತ ಬಂದು ಸೋಫದ ಮೇಲೆ ಮುದುರಿಕೊಂಡು ಕುಳಿತಳು. ಅವಳ ಮುಖದ ಮೇಲೆ ನಲಿವಿರಲಿಲ್ಲ.
ಅರ್ಧ ಓದಿದ್ದ ಕಾದಂಬರಿಯನ್ನು ಮತ್ತೆ ಕೈಗೆತ್ತಿಕೊಂಡು ದೃಷ್ಟಿಯನ್ನು ಆದರಲ್ಲಿ ಕೀಲಿಸಲು ಪ್ರಯತ್ನಿಸಿದಳು. ಮನಸ್ಸು ಅದರಲ್ಲಿ ಹುದುಗಿಕೊಳ್ಳಲಿಲ್ಲ.
“ಸೌದಾ...ಸೌದಾ...”
ಕೆಳಗೆ ನಡುಮನೆಯಿಂದಲೇ ಜೋರಾಗಿ ಕೂಗುತ್ತಿದ್ದ ಕೃಷ್ಣಪ್ರಸಾದನ ಗಡಸುಕಂಠ ಇಡೀ ಮನೆಯೆಲ್ಲ ಪ್ರತಿಧ್ವನಿಸಿತು.
ಸೌದಾಮಿನಿ ಕಿವುಡಿಯಂತೆ, ಕಿಂಚಿತ್ತೂ ಅಲುಗಾಡದೆ ಹಾಗೇ ಕುಳಿತಿದ್ದಳು. ಅವಳ ಗಮನವೆಲ್ಲ ತೆರೆದ ಪುಸ್ತಕದೊಳಗೆ.
“ಓ...ನೀನಿಲ್ಲಿದ್ದೀಯಾ?... ಸರಿ ಸರಿ, ಹಗಲೂ ರಾತ್ರಿ ನೀನು ಹೀಗೆ ಈ ಕಥೆ ಪುಸ್ತಕಗಳನ್ನ ಕೈಲಿ ಹಿಡಿದ್ಕೊಂಡು ಕೂತುಬಿಟ್ರೆ, ನಿಂಗೆ ಊಟಾ-ತಿಂಡಿ, ನಿದ್ದೆ ಒಂದು ಕಡೆಯೂ ಗಮನ ಇಲ್ಲ.....ಕಡೆಗೆ ಈ ಗಂಡಾನೂ ಬೇಡ”
ಮಹಡಿ ಹತ್ತಿ ಬಂದ ಅವನ ಮುಖ ಸಿಡುಕಿನಿಂದ ಗಂಟಾಗಿತ್ತು.
ಅವನ ಕಂಚಿನ ಕಂಠದಲ್ಲಿ ಮೊಳಗಿದ ‘ಗಂಡ' ಎಂಬ ಶಬ್ದ, ಅವಳ ಗುಂಡಿಗೆಗೆ ಜಾಗಟೆಯಂತೆ ಜೋರಾಗಿ ತಾಡಿಸಿತು.
‘ಢಣ್....ಢಣ್...!'
ಸೌದಾಮಿನಿ, ತಟ್ಟನೆ ಬಾಗಿದ ತನ್ನ ತಲೆಯನ್ನು ಬಿರುಸಾಗಿ ಮೇಲೆತ್ತಿ ಅವನತ್ತ ತೀಕ್ಷ್ಣವಾದ ಉರಿನೋಟವನ್ನು ಎರಚಿದಳು!
ಕಿವಿಯೊಳಗೆ 'ಗಂಡ' ಎಂಬ ಆ ಪದ ಕರ್ಕಶವಾಗಿ ಮಾರ್ದನಿಸಿ, ಅಂತರಂಗದ ಒಳಗೆಲ್ಲ ಚೆಲ್ಲಾಡಿ, ಅವಳ ಹೃದಯದೊಳಗೆ ನೋವಿನ ತೆರೆ ತೆರೆ ಎದ್ದು, ಅವಳ ಕಣ್ತುಂಬಿ ಬಂತು. ಅವಳ ಕಣ್ಣೋಟ ಎದುರಿಗೆ ನಿಂತಿದ್ದ ಅವನನ್ನು ಇರಿಯುತ್ತಿತ್ತು.
“ಸೌದಾ...ಯಾಕಿನ್ನೂ ಹೀಗೇ ಕೂತಿದ್ದೀಯಾ ?!... ಸಂಜೆ ಪಾರ್ಟಿ ಇದೆ, ರೆಡಿಯಾಗಿರು ಅಂತ ನಾನಾವಾಗಲೇ ನಿನಗೆ ಫೋನ್ ಮಾಡಿ ಹೇಳಿದ್ದು ಮರ್ತುಹೋಯ್ತೇನು? ಸರಿ, ಸರಿ...ಟೈಮಾಯ್ತು, ಬೇಗೆದ್ದು ರೆಡಿಯಾಗು ಹೋಗು, ಐದು ನಿಮಿಷದೊಳಗೆ,...ನಾ ಕೆಳಗಿರ್ತೀನಿ, ಬಾ ”
-ಎಂದು ಕೃಷ್ಣಪ್ರಸಾದ್ ಅವಳ ಉತ್ತರಕ್ಕೂ ಕಾಯದೆ ‘ಟಕ ಟಕ' ಬೂಟು ಸದ್ದಿನೊಂದಿಗೆ ಕೆಳಗಿಳಿದು ಹೋದ.
ಒಂದೆರಡು ನಿಮಿಷ ಸೌದಾಮಿನಿ ಶಿಲೆಯಂತೆ ಅಚಲಳಾಗಿ ಕುಳಿತಿದ್ದಳು. ಅವಳ ಮನಸ್ಸು ಮರಗಟ್ಟಿದಂತಾಗಿತ್ತು. ಮೇಲೆದ್ದು ಚೆನ್ನಾಗಿ ಅಲಂಕರಿಸಿಕೊಂಡು ಅವನೊಡನೆ ಪಾರ್ಟಿಗೆ ಹೋಗುವ ಉತ್ಸಾಹವಾಗಲಿ, ಸಡಗರವಾಗಲಿ ಹೆಡೆಯಾಡಿಸಲಿಲ್ಲ. ಅದೆಷ್ಟೋ ಹೊತ್ತು ಅವಳ ತನು ತುಸುವೂ ಮಿಸುಕಾಡದೆ ಮಂಜುಗಡ್ಡೆಯಂತೆ ಜಡವಾಗಿತ್ತು. ಮನದಲ್ಲಿ ರಿಂಗಣಗುಣಿತ...
ಇದ್ದಕ್ಕಿದ್ದ ಹಾಗೆ ಏನೋ ನೆನೆಸಿಕೊಂಡು ತತ್ಕ್ಷಣ ಮೈ ಕೊಡವಿಕೊಂಡು ಮೇಲೆದ್ದು ನಿಂತಳವಳು. ಇನ್ನೊಂದರೆಗಳಿಗೆ ತಡವಾದರೂ, ಕೆಂಡಾಮಂಡಲವಾಗಿ ಕೃಷ್ಣಪ್ರಸಾದ್ ಮತ್ತೆ ಮಹಡಿಯೇರಿ ಬಂದು ಕಟುನುಡಿಗಳನ್ನು ಆಡುತ್ತಾನೆಂಬುದನ್ನರಿತ ಸೌದಾಮಿನಿ, ಅರ್ಧ ಓದಿದ್ದ ಕಾದಂಬರಿಯನ್ನು ಒಲ್ಲದ ಮನದಿಂದ ಬದಿಗಿಟ್ಟು, ಬೇಸರದಿಂದ ಗೊಣಗಿಕೊಳ್ಳುತ್ತ ಮುಖ ತೊಳೆಯಲು ಬಚ್ಚಲು ಮನೆಯತ್ತ ಸರಸರನೆ ಹೆಜ್ಚೆ ಹಾಕಿದಳು.
“ಸೌದಾ...”
ಅಷ್ಟರಲ್ಲಾಗಲೇ ಕೆಳಗಿನಿಂದ ಬುಲಾವ್!
ಡ್ರೆಸ್ಸಿಂಗ್ ಟೇಬಲ್ ಮುಂದೆ ಕೂತಿದ್ದ ಅವಳು ಯಾಂತ್ರಿಕವಾಗಿ ಮುಖಕ್ಕೆ ತೆಳುವಾಗಿ ಪೌಡರ್ ಲೇಪಿಸಿಕೊಂಡು, ಹಣೆಗೆ ಸಣ್ಣ ತಿಲಕದ ಸ್ಟಿಕ್ಕರ್ ಅಂಟಿಸಿಕೊಂಡು, ಉದ್ದನೆಯ ಹೆರಳನ್ನು ಸಡಿಲವಾಗಿ ಹೆಣೆದುಕೊಂಡು, ಸರಳವಾಗಿ ಅಲಂಕರಿಸಿಕೊಂಡು ಪಾರ್ಟಿಗೆ ಹೊರಡಲು ಸಿದ್ಧಳಾದಳು.
ಅವಳೆದುರಿಗಿದ್ದ ಡ್ರೆಸ್ಸಿಂಗ್ ಟೇಬಲ್ ಮೇಲೆ ಸಾಲು ಸಾಲಾಗಿಟ್ಟಿದ್ದ ನಾನಾ ಬಗೆಯ, ದುಬಾರಿ ಬೆಲೆಯ ಶೃಂಗಾರ ಸಾಮಗ್ರಿಗಳ ಡಬ್ಬಿಗಳ ಮುಚ್ಚಳ ತೆರೆಯದೆ ಅದೆಷ್ಟು ದಿನಗಳಾಗಿದ್ದವೋ?!
ಹೊರಡಲನುವಾಗಿ, ಮಹಡಿ ಇಳಿದು ಕೆಳಗೆ, ತನ್ನ ಎ ದುರಿಗೆ ಬಂದು ನಿಂತ ಸೌದಾಮಿನಿಯನ್ನು ಅಡಿಯಿಂದ ಮುಡಿಯವರೆಗೆ ದಿಟ್ಟಿಸಿದ ಕೃಷ್ಣಪ್ರಸಾದನ ಕಣ್ಣುಗಳು ಕೋಪದಿಂದ ಕಿರಿದಾದವು.
ಆಕ್ಷೇಪಣೆಯಿಂದ ಅವನ ಹುಬ್ಬುಗಂಟಿಕ್ಕಿತು.
“ಇದೇನು ನಿನ್ನ ಅವತಾರ?!... ಹೇಗಿದ್ದೋಳು ಹಾಗೇ ಹೊರಟು ನಿಂತಿದ್ದೀಯಲ್ಲ?!...ಪಾರ್ಟಿಗೆ ಹೋಗೋ ರೀತೀನಾ ಇದು?!... ನೋ...ನೋ... ನೋ...ನೋ... ನೀನು ಇಷ್ಟು ಸಾಧಾರಣವಾಗಿ ಬಂದ್ರೆ ನನ್ನ ಪ್ರೆಸ್ಟೀಜ್ ಗತಿಯೇನು ಹೇಳು ? ಎಲ್ಲರ ಮುಂದೆ ನೀನಿವತ್ತು ನನ್ನ ಮಾನ ಕಳೀಬೇಕೊಂತಿದ್ದೀಯೇನು...ಗೋ ಗೋ ?”
-ಕೃಷ್ಣಪ್ರಸಾದ್ ಸಿಟ್ಟಾಗಿ ಜೋರಾಗಿ ಗುಡುಗಿದ್ದ.
ಸೌದಾಮಿನಿ ವಿಚಲಿತಳಾಗದೆ ಹಾಗೇ ತಲೆಬಾಗಿಸಿ ನಿಂತಿದ್ದಳು.
“ಸೌದಾ, ನಿನಗೇ ಹೇಳ್ತಿರೋದು... ಸರಿಯಾಗಿ ಮೇಕಪ್ ಮಾಡ್ಕೊಂಡು, ಮೊನ್ನೆ ನಾನು ನಿನ್ನ ಹುಟ್ಟಿದ ಹಬ್ಬಕ್ಕೆ ತಂದ್ಕೊಟ್ನಲ್ಲ ಆ ಕಂಚೀ ಸೀರೆಯನ್ನು ಉಟ್ಕೊಂಡು, ಕೆಂಪಿನಸೆಟ್ ಹಾಕ್ಕೊಂಡು, ಹೇರ ಸ್ಟೈಲ್ ಬೇರೆ ಮಾಡ್ಕೊಂಡು, ಬೇಗ ರೆಡಿಯಾಗಿ ಬಾ ಹೋಗು...ಆ್ಞಂ...ಬೀ ಕ್ವಿಕ್ ''
-ಅವನ ದನಿಯಲ್ಲಿ ಅಪ್ಪಣೆಯ ಕಾಠಿಣ್ಯ ತುಂಬಿ ತುಳುಕುತ್ತಿತ್ತು.
ಸೌದಾಮಿನಿಗೇಕೋ ಅವನ ಆಣತಿ ಕಂಡು ರೇಗಿ ಹೋಯಿತು.
‘ತಾನೇನು ಅವನ ತಾಳಕ್ಕೆ ತಕ್ಕಂತೆ ಕುಣಿಯುವ ನಿರ್ಜೀವ ಗೊಂಬೆಯೇ?'
ಮನಸ್ಸು ಕೋಪದಿಂದ ಪ್ರತಿಕ್ರಿಯಿಸಿದರೂ ತುಟಿಗಳು ಮಾತ್ರ ಮೆತ್ತಿಕೊಂಡಿದ್ದವು. ಮುಖ ಮ್ಲಾನವಾಯಿತು.
ಇನ್ನೂ ಅವನ ಹುಬ್ಬುಗಳು ಹೆಣೆದುಕೊಂಡೇ ಇದ್ದವು.
“ಇಟ್ ಈಸ್ ಮೈ ಪ್ರೆಸ್ಟೀಜ್ ಕ್ವಶ್ಚನ್ ಐ ಸೇ... ಸ್ವಲ್ಪಾನೂ ಸೀರಿಯೆಸ್ನೆಸ್ ಇಲ್ಲಾ ನಿಂಗೆ ಸೌದಾ ?... ಅಲ್ಲಿ ನನ್ನ ಬಿಜಿನೆಸ್ ಪಾರ್ಟನರ್ಸ್ ಹೆಂಡ್ತೀರೆಲ್ಲ ಎಷ್ಟು ಜೋರಾಗಿ ಡ್ರೆಸ್ ಮಾಡ್ಕೊಂಡು ಬಂದಿರ್ತಾರೆ ನೋಡು... ಅವರುಗಳ ಜೊತೆ ನೀನು ಕಾಂಪೀಟ್ ಮಾಡೋದು ಬೇಡ್ವಾ?!”
-ಎಂದವನು ಗತ್ತಿನಿಂದ ಕೇಳಿದಾಗ, ಅವಳೊಳಗೆ ಕುದಿಯುತ್ತಿದ್ದ ಮಾತುಗಳೆಲ್ಲ ಸದ್ದಿಲ್ಲದೆ ಒಳಗೇ ಜಾರಿಕೊಂಡವು. ಅದೂ ಅಲ್ಲದೆ ಅವನ ಮಾತಿಗೆ ಮಾತು ಬೆಳೆಸಿ ಪ್ರತಿಯೇಟು ಕೊಡುವ ಸಮಯವೂ ಇದಲ್ಲವೆಂದರಿತು ಅವಳು ಮೆಲ್ಲನೆ ಅಲ್ಲಿಂದ ಸರಿಡು ಹೋದಳು.
ಗತ್ಯಂತರವಿರಲಿಲ್ಲ ಅವಳಿಗೆ. ಅವನು ಮಹಾ ಜಿಗುಟು ಮನುಷ್ಯನೆಂಬುದನ್ನು ಚೆನ್ನಾಗಿ ಬಲ್ಲಳವಳು. ಎಲ್ಲವೂ ತಾನು ಹೇಳಿದಂತೆಯೇ ಆಗಬೇಕು ಎನ್ನುವ ಹಠ ಅವನದು. ಈ ಮನೆಯಲ್ಲಿ ತನ್ನದೇ ಕಟ್ಟಕಡೆಯ ಮಾತು ಎಂಬ ಧೋರಣೆ , ಧಿಮಾಕು ಬೆಳೆಸಿಕೊಂಡು ಸ್ಟ್ರಿಕ್ಟ್ ಆಗಿ ವರ್ತಿಸುತ್ತಿದ್ದ ಅವನಿಗೆ ಎದುರಾಡುವ ಧೈರ್ಯವನ್ನು ಇಂದವಳು ಪ್ರದರ್ಶಿಸಲಿಲ್ಲ.
ಕೆಳದುಟಿ ಕಚ್ಚಿಕೊಂಡು, ಮೌನವಾಗಿ ಸರಸರನೆ ಮಹಡಿಯೇರಿದಳು.
“ಸ್ವಾಮಿ, ಒಂದರ್ಧ ಕಪ್ ಕಾಫಿ ತರಲಾ?'' ಅಡುಗೆಯ ದ್ವಾರಕಿ, ಎರಡಡಿ ಮುಂದಿಟ್ಟು ಅನುಮಾನಿಸುತ್ತಲೇ ಕೇಳಿದ.
ಅವನಿಗೆ ಗೊತ್ತು, ಕೃಷ್ಣಪ್ರಸಾದನ ಕೋಪದ ಉಪಶಮನಕ್ಕೆ ಆಗಾಗ ಕಾಫಿಯ ಆಜ್ಯ ಹುಯ್ಯಬೇಕೆಂದು.
ಕೃಷ್ಣಪ್ರಸಾದ್ ಜರ್ಬಿನಿಂದಲೇ “ಹೂಂ” ಅಂದ.
“ಓ ರಾಯರ ಕೋಪದ ಡಿಗ್ರಿಗೆ ಅರ್ಧಕಪ್ ಸಾಲಲ್ಲ, ಮುಕ್ಕಾಲೇ ತರ್ತೀನಿ” ಎಂದು ಸ್ವಗತವಾಡಿಕೊಳ್ಳುತ್ತ ನಕ್ಕು, ಅಲ್ಲಿಂದ ಅಡುಗೆ ಮನೆಯತ್ತ ಹೆಜ್ಜೆಯಿಟ್ಟ ದ್ವಾರಕಿಯ ಮೊಗದಲ್ಲಿ ಕಿರುನಗೆ ಬಳುಕುತ್ತಿತ್ತು.
ಹೆಜ್ಜೆ ಹೆಜ್ಜೆಯಲ್ಲೂ ಹೆಂಡತಿಯನ್ನು ಅಂಕೆಯಲ್ಲಿಟ್ಟುಕೊಳ್ಳಲು ಪ್ರಯತ್ನಿಸುವ ಕೃಷ್ಣಪ್ರಸಾದನದು ಖಾಲಿ ಒಣದರ್ಪ ಎಂಬುದನ್ನು ಅವನು ಚೆನ್ನಾಗಿ ಬಲ್ಲ.
ನಾಲ್ಕೈದು ಬಾರಿ ಗಡಿಯಾರ ನೋಡಿಕೊಳ್ಳುತ್ತ ಮಹಡಿಯತ್ತ ತಲೆಯೆತ್ತಿ ನೋಡುತ್ತಲೇ ಇದ್ದ ಕೃಷ್ಣಪ್ರಸಾದ್. ಅಸಹನೆಯಿಂದ ಅವನ ದಟ್ಟ ಹುಬ್ಬುಗಳು ಬೆಸೆದುಕೊಂಡಿದ್ದವು.
ಕೃಷ್ಣಪ್ರಸಾದ್, ಹೆಸರಿಗೆ ತಕ್ಕ ಹಾಗೆ ಅವನು ಕಪ್ಪಗೆ ಮಿರುಗುತ್ತಿದ್ದರೂ, ನೇರವಾದ ಎತ್ತರದ ಮೂಗು, ಬಿಳುಪಾದ ದಂತ ಪಂಕ್ತಿ, ದುಂಡನೆಯ ಮುಖದಿಂದ ಲಕ್ಷಣವಾಗಿ ಕಾಣುತ್ತಿದ್ದ. ತಲೆಯ ಮೇಲಿನ ಸೊಂಪಾದ ಕೂದಲು, ಈಗೀಗ ನಿಯತ ಬಣ್ಣಲೇಪನದಿಂದ ಕೊಂಚ ಬರಡಾಗಿ ಅಲ್ಲಲ್ಲಿ ನೆತ್ತಿಯನ್ನು ಪ್ರದರ್ಶಿಸುತ್ತಿತ್ತು. ಮುಖದ ಗಾಂಭೀರ್ಯ ಹೆಚ್ಚಿಸುವಂತಿದ್ದ ಅಗಲವಾದ, ಕಪ್ಪು ಕಟ್ಟಿನ ಕನ್ನಡಕ.
ಆದರೂ ಶಿಸ್ತಿನ ಸಿಪಾಯಿ ಅವನು. ಸೊಗಸುಗಾರನೂ ಹೌದು. ಸದಾ ಗರಿಗರಿಯಾಗಿ ಇಸ್ತ್ರಿಮಾಡಿದ ನೊರೆ ಬಿಳುಪಿನ ಡ್ರೆಸ್ಗಳು ಅವನಿಗೆ ಅತ್ಯಂತ ಪ್ರಿಯ. ಪಾರ್ಟಿ-ಮದುವೆ ಮುಂತಾದ ವಿಶೇಷ ಸಮಾರಂಭಗಳಲ್ಲಿ ತ್ರೀಪೀಸ್ ಸೂಟ್. ಇದ್ದ ಕೆಲವೇ ಕೂದಲನ್ನು ಬ್ರಿಲ್ಕ್ರೀಂ ಹಾಕಿ ನುಣ್ಣಗೆ ಬಾಚಿ, ಮುಖಕ್ಕೆ ಪೌಡರ್ ಲೇಪಿಸಿ, ತಿಳಿನೀಲಿ ಬಣ್ಣದ ಸೂಟ್ ಧರಿಸಿ ಘಮ್ಮೆನ್ನುವ ಇಂಪೋರ್ಟೆಡ್ ಸೆಂಟ್ ಪೂಸಿಕೊಂಡಿದ್ದ. ತಟ್ಟನೆ ಅವನನ್ನು ನೋಡಿದರೆ ಅವನಿಗೆ ಐವತ್ತಾರು ವರ್ಷ ದಾಟಿದೆ ಎಂದು ಯಾರೂ ಹೇಳುವಂತಿರಲಿಲ್ಲ. ಒಳ್ಳೆಯ ಪರ್ಸನಾಲಿಟಿ. ತೆಳ್ಳಗೆ ಉದ್ದಕ್ಕಿದ್ದ ಅವನು ಸದಾ ಚಟುವಟಿಕೆಯ ಚಿಲುಮೆ. ಬೆಳಗ್ಗೆ ನಿಯತವಾದ ವಾಕಿಂಗ್, ವ್ಯಾಯಾಮ- ಟೆನಿಸ್ ಆಟ. ಕ್ಲುಪ್ತವಾದ ಸಮಯಕ್ಕೆ ಸರಿಯಾಗಿ ತಿಂಡಿ-ಊಟ. ಅದೂ ಡಯಟ್ ಆಹಾರ. ದಿನಕ್ಕೆ ಬೇಕಾದರೆ ನಾಲ್ಕು ಸಲ ಆಫೀಸಿಗೆ ಹೋಗಿ ಬರುತ್ತಾನೆ, ಕೆಲಸದ ಮೇಲೆ ಅಲ್ಲಿ ಇಲ್ಲಿ ಎಂದು ಹತ್ತಾರು ಕಡೆ ಓಡಾಡುತ್ತಲೇ ಇರುತ್ತಾನೆ. ಒಂದು ಜಾಗದಲ್ಲಿ ಅವನು ಅರ್ಧಗಂಟೆ ಕೂತಿದ್ದರೇ ಹೆಚ್ಚು. ಮನೆಯಲ್ಲಿದ್ದರೂ ಸದಾ ಫೋನು.
“ಸೌದಾ...” ಅವನ ಕಂಚಿನ ಕಂಠ ಮತ್ತೊಮ್ಮೆ ಮೊಳಗಿತು.
ಮೇಲಿನಿಂದ ಸೌದಾಮಿನಿ 'ಬಂದೆ' ಎಂದಳು ಭಯಭೀತ ಅವಸರದ ಧ್ವನಿಯಲ್ಲಿ . ಆದರೂ ಮೇಲೆದ್ದು ಅತ್ತಿಂದಿತ್ತ ಶತಪಥ ಹಾಕಿದ ಕೃಷ್ಣ ಪ್ರಸಾದ್, ತಲೆಯೆತ್ತಿ ಮೇಲೆ ನೋಡಿದ ಮತ್ತೊಮ್ಮೆ.
ಉತ್ತರವಾಗಿ ಸೌದಾಮಿನಿ ಧಡಧಡನೆ ಮಹಡಿಯ ಮೇಲಿಂದ ಕೆಳಗಿಳಿದು ಬಂದು ಅವನ ಮುಂದೆ ನಿಂತಳು ವಿಧೇಯ ವಿದ್ಯಾರ್ಥಿನಿಯಂತೆ .
ಅಡಿಯಿಂದ ಮುಡಿಯವರೆಗೆ ನಿಧಾನವಾಗಿ ಅವಳನ್ನು ದಿಟ್ಟಿಸಿ ನೋಡಿದವನ ಮುಖವರಳಿತು- ತೃಪ್ತಿಯ ಭಾವ ಹೊರಸೂಸಿತು. ಅವನು ಹೇಳಿದ್ದನ್ನು ಶಿರಸಾ ವಹಿಸಿದ್ದಳು ಅವನ ಮುದ್ದಿನ ಅರಗಿಣಿ ಸೌದಾಮಿನಿ. ಪುಟ್ಟಗೌರಿಯಂತೆ ಅಂದವಾಗಿ ಸಿಂಗರಗೊಂಡಿದ್ದ ಅವಳ ರೂಪರಾಶಿಯನ್ನು ಎವೆ ಇಕ್ಕದೆ ದಿಟ್ಟಿಸಿ ನೋಡಿದ.
ಸೌದಾಮಿನಿ ನೆರಳಿನಂತೆ ಅವನನ್ನು ಅನುಸರಿಸಿದಳು.
ಬೆಳಗ್ಗೆ ಆಫೀಸಿಗೆ, ಇನ್ನಿತರ ಕೆಲಸ ಕಾರ್ಯಗಳಿಗೆ ಹೋಗುವಾಗ ಮಾತ್ರ ಡ್ರೈವರ್ ಅವನ ಜೊತೆ ಬರುತ್ತಿದ್ದ. ಉಳಿದ ಕಡೆ-ವೇಳೆಯಲ್ಲಿ ಕೃಷ್ಣಪ್ರಸಾದನಿಗೆ ಏಕಾಂತ ಬೇಕೆನಿಸುತ್ತಿತ್ತು. ಅದರಲ್ಲೂ ವಿಶೇಷವಾಗಿ ಸೌದಾಮಿನಿಯೊಡನೆ ಹೊರ ಸುತ್ತಾಟಕ್ಕೆ -ಪಾರ್ಟಿಗಳಿಗೆ ಹೊರಟಾಗ ಡ್ರೈವರ್ ಅನ್ನು ಬೇಡ ಎನ್ನುತ್ತಿದ್ದ.
ಕೃಷ್ಣಪ್ರಸಾದ್ ಇಂದು ಗೆಲುವಿನಿಂದ ಕಾರು ಸ್ಟಾರ್ಟ್ ಮಾಡಿದ. ಅವನ ಮಗ್ಗುಲಲ್ಲಿ ಕುಳಿತಿದ್ದ ಸೌದಾಮಿನಿ , ಮೂಕವೀಣೆಯಂತೆ, ಮಿಡಿದರೆ ಧುಮ್ಮಿಕ್ಕಿ ಹೊಮ್ಮುವಂತೆ, ತನ್ನಲ್ಲಿ ಉಮ್ಮಳಿಸುತ್ತಿದ್ದ ಅಗಾಧ ಝೇಂಕಾರಗಳನ್ನು ಅಂತರಂಗದೊಳಗೇ ಇರುಕಿಕೊಂಡು ಬಿಮ್ಮನೆ ಕುಳಿತಿದ್ದಳು.
ಪಾರ್ಟಿ ಹಾಲ್ ತಲುಪುವವರೆಗೂ, ಅವಳು ಅಪ್ಪಿ ತಪ್ಪಿಯೂ ಪಕ್ಕದಲ್ಲಿ ಡ್ರೈವ್ ಮಾಡುತ್ತ ಕುಳಿತಿದ್ದವನತ್ತ ದೃಷ್ಟಿ ಹೊರಳಿಸಲಿಲ್ಲ. ದಾರಿಯುದ್ದಕ್ಕೂ ಅವನು ಮಾತನಾಡುತ್ತ ಬಂದ ಯಾವ ಮಾತೂ -ಪ್ರಶ್ನೆಗಳಿಗೂ ಅವಳು ತುಟಿ ಬಿರಿಯಲಿಲ್ಲ.
ಸೌದಾಮಿನಿಗೆ ಇಂಥ ಪಾರ್ಟಿಗಳು ಹೊಸದೇನಲ್ಲ. ತಿಂಗಳಿಗೆರಡು ಇಂಥವು ಇದ್ದೇ ಇರುತ್ತವೆ. ಕೆಲವು ಹೊರಗಿನವರದಾದರೆ, ಇನ್ನು ಕೆಲವು ಪಾರ್ಟನರ್ಸ್ಗಳ ಕುಟುಂಬಗಳಿಗೆ ಮಾತ್ರ ಸೀಮಿತವಾಗಿರುವಂಥವು.
ಕೃಷ್ಣಪ್ರಸಾದನ ಇಬ್ಬರು ಬಿಸಿನೆಸ್ ಪಾರ್ಟನರ್ಸ್ಗಳೆಂದರೆ ಕಶ್ಯಪ್ ಹಾಗೂ ರಾಜಗೋಪಾಲ್. ಈ ಮೂವರ ನಡುವೆಯೂ ಒಳ್ಳೆಯ ಹೊಂದಾಣಿಕೆಯಿತ್ತು. ಸಮರಸವಾಗಿ ಕೆಲಸ, ಕಾರ್ಯಗಳನ್ನು ನಿಭಾಯಿಸುತ್ತಿದ್ದರು.
ಯಾವುದೇ ಪಾರ್ಟಿಗಳಲ್ಲೂ ಮೂರು ಕುಟುಂಬಗಳೂ ಬೆರೆಯುತ್ತಿದ್ದವು. ವರ್ಷಕ್ಕೊಂದು ಸಲ ಅವರೆಲ್ಲ ಹೊರಗೆ ಪ್ರವಾಸವೂ ಹೋಗಿ ಬರುತ್ತಿದ್ದರು.
ಹೀಗಾಗಿ ಇಂಥ ಅವಕಾಶಗಳು ಸೌದಾಮಿನಿಯ ಪಾಲಿಗೆ ಸಂತಸ ತರುವ ಬೆಳಕಿಂಡಿಗಳು!
ಮುಂದುವರೆಯುತ್ತದೆ ( ಮುಂದಿನ ಭಾಗ ತಪ್ಪದೆ ಓದಿ- ಸೌದಾಮಿನಿಯ ಅಂತರಂಗದ ಕುದಿತ ಏನೆಂದು ಎಳೆ ಎಳೆಯಾಗಿ ಬಿಚ್ಚಿಕೊಳ್ಳುತ್ತದೆ)
ನನ್ನ ಮೊದಲ ಕಾದಂಬರಿ 'ಬೊಗಸೆ ಬೆಳದಿಂಗಳು' ಕೃತಿಗೆ ನೀವೆಲ್ಲ ತುಂಬಾ ಒಳ್ಳೆಯ ಪ್ರತಿಕ್ರಿಯೆಗಳನ್ನು ವ್ಯಕ್ತ ಪಡಿಸಿದ್ದೀರಿ. ತುಂಬಾ ಖುಷಿಯಾಯಿತು. ಈ 'ನೆಲೆಗಾಣದ ಹಕ್ಕಿ' ಕಾದಂಬರಿಯನ್ನೂ ಅಷ್ಟೇ ಪ್ರೀತಿಯಿಂದ ಓದಿ, ಉತ್ತಮ ರೇಟಿಂಗ್ ನೀಡಿ ಪ್ರೋತ್ಸಾಹಿಸಿ. ನನ್ನ ಎಲ್ಲ ಬರಹಗಳ ನೋಟಿಫಿಕೇಶನ್ ಗಳನ್ನು ಪಡೆಯಲು ನನ್ನನ್ನು ಹಿಂಬಾಲಿಸಿ ಎಂದು ಕೋರುತ್ತೇನೆ.
-ನಿಮ್ಮ ನಲ್ಮೆಯ ಲೇಖಕಿ, ವೈ.ಕೆ.ಸಂಧ್ಯಾ ಶರ್ಮ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ